ಬೆಂಗಳೂರು: ಮಾರ್ಚ್ 22 ರಂದು ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡಿಕೆ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಮಾ.22 ರಂದು 6,7,8,9ನೇ ತರಗತಿ ಪರೀಕ್ಷೆಗಳು ನಿಗದಿಯಾಗಿವೆ. ಬಂದ್ ಕಾರಣಕ್ಕೆ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಿಲ್ಲ. ಪರೀಕ್ಷೆ ಅದರ ಪಾಡಿಗೆ ನಡೆಯಲಿದೆ. ಮಕ್ಕಳಿಗೆ ಯಾವುದೇ ತೊಂದರೆ ಆಗದೇ ಇರುವ ರೀತಿ ಬಂದ್ ಗೆ ಕರೆ ಕೊಟ್ಟವರು ಸಹಕಾರ ಕೊಡಲಿದ್ದಾರೆ ಎಂದು ವಿಶವಶಸ ವ್ಯಕ್ತಪಡಿಸಿದರು. ಹೋರಾಟ ಮಾಡುವ ಹಕ್ಕು ನಿಮಗಿದೆ. ಆದರೆ ಪರೀಕ್ಷೆ ಮಕ್ಕಳ ಭವಿಷ್ಯದಿಂದ ಮುಖ್ಯ. ಮಕ್ಕಳ ಭವಿಷ್ಯ ಪರೀಕ್ಷೆಯಲ್ಲಿದೆ. ಮಕ್ಕಳ ಭವಿಷ್ಯಕ್ಕೆ ಯಾವುದೇ ಅಡಚಣೆ ಮಾಡಲಾರರು ಎಂದಿದ್ದಾರೆ.
ಬಂದ್ ಮಾಡುವ ಹೋರಾಟಗಾರರು ಪರೀಕ್ಷೆಗೆ ಹೋಗಬೇಡಿ ಎಂದು ಮಕ್ಕಳಿಗೆ ಹೇಳುವುದಿಲ್ಲ. ಮಕ್ಕಳು ಗೊಂದಲ ಆಗುವುದು ಬೇಡ. 6,7,8,9 ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತವೆ. ಈಗಾಗಲೇ ವೇಳಾಪಟ್ಟಿ ಸಿದ್ಧತೆ ಮಾಡಿ ಪ್ರಕಟ ಮಾಡಿದ್ದೇವೆ. ವೇಳಾಪಟ್ಟಿ ಬದಲಾವಣೆ ಮಾಡಲಾಗುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿಕೆ ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.